ಹೆಸರೇ ಹೇಳುವ ಹಾಗೆ ಸಂಗೀತಮಯ ಪ್ರೇಮಕಥೆ ಹೊಂದಿರುವ ಕಾಲ್ಗೆಜ್ಜೆ ಚಿತ್ರವನ್ನು ಎಸ್. ಬಂಗಾರು ಕಥೆ-ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾಡಿದ್ದಾರೆ. ನವಿರಾದ ಪ್ರೇಮಕಥೆಯೊಂದನ್ನು ವಿಭಿನ್ನ ಶೈಲಿಯಲ್ಲಿ ನಿರೂಪಿಸುವ ಪ್ರಯತ್ನ ಮಾಡಿರುವ ನಿರ್ದೇಶಕ ಬಂಗಾರು ಕರ್ನಾಟಕದ ಮೇಲುಕೋಟೆ, ಭದ್ರಾವತಿ, ಬೆಂಗಳೂರು, ಕುಂದಾಪುರ, ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಶೂಟಿಂಗ್ ಮುಗಿಸಿ, ಎಡಿಟಿಂಗ್ ಕೂಡ ಮುಗಿಸಿರುವ ಚಿತ್ರತಂಡ ಕಳೆದ ಸೋಮವಾರದಿಂದ ಚಾಮುಂಡಿ ಧ್ವನಿಗ್ರಹಣ ಕೇಂದ್ರದಲ್ಲಿ ಮಾತಿನ ಮರುಲೇಪನ ಕಾರ್ಯ ಪ್ರಾರಂಭಿಸಲಾಗಿದೆ. ಸುಮಾರು ೮ ದಿನಗಳ ಕಾಲ ನಡೆಸಲಾಗುವುದು. ಚಿತ್ರದ ೬ ಹಾಡುಗಳಿಗೆ ಗಂಧರ್ವ ಸಂಗೀತ ಸಂಯೋಜನೆ ಮಾಡಿದ್ದಾರೆ. ವೀನಸ್ ಮೂರ್ತಿ ಅವರ ಛಾಯಾಗ್ರಹಣ ಇದೆ. ಉದ್ಯಮಿ ನಾಗಭೂಷ ನಿರ್ಮಿಸುತ್ತಿದ್ದು, ವಿಶ್ವಾಸ್, ರೂಪಿಕಾ, ರಂಗಾಯಣ ರಘು, ಪವಿತ್ರಾ ಲೋಕೇಶ್, ಶರಣ್, ಅನಂತ್ನಾಗ್, ಸುಮಿತ್ರಾ, ತಬಲಾ ನಾಣಿ ತಾರಾಗಣದಲ್ಲಿದ್ದಾರೆ.